

ನನ್ನ ಮತ್ತು ಮಾಜಿ ಸಚಿವ ಅಭಯಚಂದ್ರರ ನಡುವೆ ಯಾವುದೇ ಅಸಮಾಧಾನವಿಲ್ಲ. ಕೆಲವರು ನಮ್ಮ ಬಗ್ಗೆ ಅಪಪ್ರಚಾರ ಮಾಡಿ ಲಾಭಗಳಿಸಲೆತ್ನಿಸಿದ್ದಾರೆ. ಇಂತಹ ಚುನಾವಣಾ ಗಿಮಿಕ್ ನಡೆಯೋದಿಲ್ಲ. ಅಭಯಚಂದ್ರ ಅವರು ಅವರ ಕುಟುಂಬದವರಿಗೆ ಟಿಕೆಟ್ ಕೇಳದೆ ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದ ನನ್ನನ್ನು ಕರೆ ತಂದು ಅವಕಾಶ ಒದಗಿಸಿದ್ದಾರೆ.
ನನ್ನ ಕೊನೆಯುಸಿರಿರುವವರೆಗೂ ಅಭಯಚಂದ್ರ ಅವರನ್ನು ಮರೆಯೋದಿಲ್ಲ. ಅವರ ಮಾರ್ಗದರ್ಶನದಲ್ಲೇ ಮುಂದುವರಿಯುತ್ತೇನೆ.
ಈ ಚುನಾವಣೆಯಲ್ಲಿ ಅಭಯರು ಕೃಷ್ಣನಂತೆ ಸಾರಥ್ಯ ವಹಿಸಿದರೆ ನಾನು ಅರ್ಜುನನಂತೆ ಕೆಲಸ ಮಾಡುತ್ತೇನೆ. ನಮ್ಮಿಬ್ಬರ ನಡುವಿನ ಗುರು ಶಿಷ್ಯರ ಸಂಬಂಧ ಜೀವನದ ಕೊನೆವರೆಗೂ ಇದೇ ರೀತಿ ಇರುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಹೇಳಿದರು.

ಮೂಡಬಿದ್ರೆಯಲ್ಲಿ ನಾಮಪತ್ರ ಸಲ್ಲಿಕೆ ಮುಂಚೆ ಸ್ವರಾಜ್ಯ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು , ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಪಪ್ರಚಾರ ಮಾಡಿ ಸೋತಿದ್ದವರು ಕೊನೆ ಅಸ್ತ್ರವೆಂಬಂತೆ ಈ ರೀತಿಯಾಗಿ ನಮ್ಮಿಬ್ಬರ ನಡುವೆ ಈ ರೀತಿಯಾಗಿ ಅಪಪ್ರಚಾರ ಮಾಡಿದ್ದಾರೆ, ನಮ್ಮ ಸಂಬಂಧ ಹೇಗಿದೆ ಎನ್ನುವುದನ್ನು ಕ್ಷೇತ್ರದ ಜನತೆ ಅರಿತಿದ್ದಾರೆ, ಇದ್ಯಾವುದೂ ನಡೆಯೋದಿಲ್ಲವೆಂದು ಹೇಳಿದ ಅವರು ಯುವಕರಿಗೆ ಉದ್ಯೋಗ, ಮುನ್ನೂರು ಹಾಸಿಗೆಯುಳ್ಳ ಸುಸಜ್ಜಿತವಾದ ಸರಕಾರಿ ಆಸ್ಪತ್ರೆ ಹಾಗೂ ಇನ್ನಿತರ ಯೋಜನೆಗಳ ಸಂಕಲ್ಪ ಹೊಂದಿದ್ದೇನೆ ಎಂದರು. ವೇದಿಕೆಗೆ ಬಂದು ಮೊದಲು ಗುರು ಅಭಯಚಂದ್ರ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಮಿಥುನ್ ರೈ ತನ್ನನ್ನು ಬೆಂಬಲಿಸಿ ವಿಜಯಗೊಳಿಸಬೇಕೆಂದು ಭಿನ್ನವಿಸಿಕೊಂಡರು. ಬಳಿಕ ತನ್ನ ದೊಡ್ಡ ಮಟ್ಟಿನ ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರೊಂದಿಗೆ ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು. ಮೆರವಣಿಗೆಯಲ್ಲಿ ಬೃಹತ್ ಜನಸ್ತೋಮ ಕಂಡುಬಂದಿದ್ದು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿದೆ. ಮಿಥುನ್ ರೈ ಅವರ ತಂದೆ ತಾಯಿ, ಸಹೋದರರು ಈ ಸಭೆಯಲ್ಲಿ ಭಾಗವಹಿಸಿದ್ದು ಅವರ ಕಾಲು ಹಿಡಿದು ಆಶೀರ್ವಾದ ಪಡೆದ ಬಳಿಕ ನಾಮಪತ್ರ ಸಲ್ಲಿಸಲು ತೆರಳಿದರು.

