

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಗುರುವಾರ 42 ಮಂದಿ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಎಚ್.ಡಿ ದೇವೇಗೌಡರ ಆಪ್ತರಾಗಿದ್ದ ಕಡೂರು ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ ದತ್ತಾ ಅವರ ಹೆಸರು ಪಟ್ಟಿಯಲ್ಲಿಲ್ಲ. ಅವರ ಬದಲಿಗೆ ಕಡೂರು ಕ್ಷೇತ್ರಕ್ಕೆ ಕೆ.ಎಸ್ ಆನಂದ್ ಅವರ ಹೆಸರನ್ನು ಹೈಕಮಾಂಡ್ ಘೋಷಿಸಿದೆ.

ಕಡೂರು ಕ್ಷೇತ್ರದಿಂದ ಜೆಡಿಎಸ್ ನಿಂದ ಮೊದಲ ಬಾರಿಗೆ 2013ರಲ್ಲಿ ಶಾಸಕರಾಗಿ ಚುನಾಯಿತರಾದ ಅವರು, ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಸ್ಥಾನವನ್ನೂ ಅಲಂಕರಿಸಿದ್ದರು. ಇನ್ನು ಎಂಎಲ್ಸಿ, ಪಕ್ಷ ವಕ್ತಾರ ಸ್ಥಾನಗಳನ್ನು ಪಡೆದಿದ್ದರು.
2018 ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಡೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಪರಾಭವಗೊಂಡರು.

ನಾನು ಎಲ್ಲೇ ಇದ್ದರೂ ದೇವೇಗೌಡರ ಹಾರೈಕೆ ನನ್ನ ಮೇಲೆ ಇದ್ದೇ ಇರುತ್ತದೆ ಎಂದು ಹೇಳುತ್ತಲೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ದತ್ತಾ ಅವರು ಸಿದ್ದರಾಮಯ್ಯ ಅವರ ಆಪ್ತರಾಗಿದ್ದಾರೆ. ಇನ್ನು ಕಡೂರಿನಲ್ಲಿ ಕೆಲ ಮೂಲ ಕಾಂಗ್ರೆಸ್ಸಿಗರ ವಿರೋಧದ ಹೊರತಾಗಿಯೂ ದತ್ತಾ ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆಯಿತ್ತು ಎನ್ನಲಾಗಿದೆ. ಆದರೆ, ಕಾಂಗ್ರಸ್ ದತ್ತಾ ಬದಲಿಗೆ ಕೆ.ಎಸ್ ಆನಂದ್ ಅವರಿಗೆ ಮಣಿ ಹಾಕಿದೆ.
