

ಘಟನೆಗೆ ಸಂಬಂಧಿಸಿದಂತೆ ಈವರೆಗೆ ಸುಮಾರು 45 ಜನರನ್ನು ಬಂಧಿಸಲಾಗಿದ್ದು, ಘಟನೆಯಲ್ಲಿ ಪೊಲೀಸ್ ವಾಹನಗಳು ಸೇರಿದಂತೆ ಹಲವು ವಾಹನಗಳು ಬೆಂಕಿಗಾಹುತಿಯಾಗಿವೆ. ಈ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಹೌರಾದಲ್ಲಿ ಸಿಆರ್ಪಿಸಿ 144 ಸೆಕ್ಷನ್ ಹೇರಲಾಗಿದೆ.
ಕೋಲ್ಕತಾ (ಏಪ್ರಿಲ್ 1, 2023): ರಾಮನವಮಿ ಮೆರವಣಿಗೆ ವೇಳೆ ಪಶ್ಚಿಮ ಬಂಗಾಳದ ಹೌರಾದಲ್ಲಿ ಗುರುವಾರ ಆರಂಭವಾಗಿದ್ದ ಹಿಂಸಾಚಾರ ಶುಕ್ರವಾರವೂ ಮುಂದುವರೆದಿದ್ದು, ಉದ್ರಿಕ್ತರು ಹಲವು ಕಡೆ ಕಲ್ಲು ತೂರಾಟ ನಡೆಸಿ, ಅಂಗಡಿ ಮುಂಗಟ್ಟುಗಳನ್ನು ಪುಡಿಗಟ್ಟಿದ್ದಾರೆ. ಇದರ ಬೆನ್ನಲ್ಲೇ ಹೌರಾದಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಗಲಭೆಕೋರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಆದರೂ ಸಹ ಗುಂಪು ಸ್ಥಳದಲ್ಲಿದ್ದ ಮಾಧ್ಯಮದವರೂ ಸೇರಿದಂತೆ ಹಲವರ ಮೇಲೆ ಕಲ್ಲು ತೂರಾಟ ನಡೆಸಿದೆ. ಘಟನೆಯು ಬಿಜೆಪಿ ಹಾಗೂ ಆಡಳಿತಾರೂಢ ಟಿಎಂಸಿ ನಡುವೆ ರಾಜಕೀಯ ವಾಕ್ಸಮರಕ್ಕೆ ನಾಂದಿ ಹಾಡಿದೆ.

ಆಗಿದ್ದೇನು?:
ಶಿಬ್ಪುರದಲ್ಲಿ ಗುರುವಾರ ಹಿಂಸಾಚಾರ ನಡೆದಿತ್ತು. ಈ ಸ್ಥಳವನ್ನು ಶುಕ್ರವಾರ ಜನ ಸಂಚಾರಕ್ಕೆ ತೆರವು ಮಾಡಲಾಗಿತ್ತು. ಮಧ್ಯಾಹ್ನ ಬಿಜೆಪಿ ಕಾರ್ಯಕರ್ತರು 1.30ರ ಸುಮಾರಿಗೆ ರಸ್ತೆಗೆ ಇಳಿದು, ಅಂಗಡಿಗಳ ಮೇಲೆ ದಾಳಿ ಮಾಡಿ ಪುಡಿಗಟ್ಟಿ ಬೆಂಕಿ ಹಚ್ಚಿದ್ದಾರೆ. ಕಲ್ಲು ತೂರಾಟ ನಡೆಸಿ, ಕೆಲವು ಪೊಲೀಸ್ ವಾಹನಗಳನ್ನೂ ಜಖಂಗೊಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈವರೆಗೆ ಸುಮಾರು 45 ಜನರನ್ನು ಬಂಧಿಸಲಾಗಿದ್ದು, ಘಟನೆಯಲ್ಲಿ ಪೊಲೀಸ್ ವಾಹನಗಳು ಸೇರಿದಂತೆ ಹಲವು ವಾಹನಗಳು ಬೆಂಕಿಗಾಹುತಿಯಾಗಿವೆ. ಈ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಹೌರಾದಲ್ಲಿ ಸಿಆರ್ಪಿಸಿ 144 ಸೆಕ್ಷನ್ ಹೇರಲಾಗಿದೆ.

ಬಿಜೆಪಿ ಕಾರಣ – ಮಮತಾ ಆರೋಪ:
‘ಹಿಂಸಾಚಾರಗಳಿಗೆ ಬಿಜೆಪಿಯೇ ನೇರ ಕಾರಣ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ‘ಹೌರಾದಲ್ಲಿ ನಡೆದಿರುವ ಘಟನೆ ದುರದೃಷ್ಟಕರವಾದುದು. ಆದರೆ ಈ ಹಿಂಸಾಚಾರದ ಹಿಂದೆ ಹಿಂದೂಗಳಾಗಲ್ಲ. ಮುಸ್ಲಿಮರಾಗಲೀ ಇಲ್ಲ ಇದರ ಹಿಂದೆ ಇರುವುದು ಬಿಜೆಪಿ’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಆದರೆ ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ‘ಇದರಲ್ಲಿ ಬಿಜೆಪಿಯ ಯಾವುದೇ ಕೈವಾಡವಿಲ್ಲ. ಈ ಪ್ರಕರಣದ ಕುರಿತಾಗಿ ಎನ್ಐಎ ತನಿಖೆ ನಡೆಸಲಿ’ ಎಂದು ಹೇಳಿದೆ.
