

ಹಾವೇರಿ: ಮಸೀದಿಯೊಂದರ ಮೇಲೆ ಹಿಂದೂ ಕಾರ್ಯಕರ್ತರು (Hindu Activists) ಕಲ್ಲುತೂರಾಟ (Stone Pelting) ಮಾಡಿದ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ (Rattihalli) ಮಂಗಳವಾರ ನಡೆದಿದೆ.ಮುಸ್ಲಿಮರ ಮನೆ, ವಾಹನಗಳ ಮೇಲೂ ಕಲ್ಲುತೂರಾಟ ಮಾಡಲಾಗಿದೆ. ಹಿಂದೂ ಕಾರ್ಯಕರ್ತರು ಐ20 ಕಾರು, ಓಮ್ನಿ ಕಾರಿನ ಗ್ಲಾಸ್ ಒಡೆದು ಭಯದ ವಾತಾವರಣ ಸೃಷ್ಟಿಸಿದ್ದಾರೆ . ರಟ್ಟಿಹಳ್ಳಿ ಪಟ್ಟಣದ ಕೆಲವು ಉರ್ದು ಶಾಲೆಗಳ ಮೇಲೂ ಕಲ್ಲು ತೂರಾಟ ನಡೆದಿದೆ. ಘಟನೆಯಿಂದ ಆಘಾತಕ್ಕೊಳಗಾಗಿರುವ ವಿದ್ಯಾರ್ಥಿಗಳು ಶಾಲೆಯಿಂದ ಹೊರಬಂದು ಕಣ್ಣೀರಿಡುತ್ತಿದ್ದಾರೆ. ಮುಸ್ಲಿಂ ಆಟೋ ಚಾಲಕರೊಬ್ಬರನ್ನು ಹಿಂದೂ ಕಾರ್ಯಕರ್ತರು ಥಳಿಸಿದ್ದಾರೆ. ಆಟೋದ ಗಾಜು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಇದೀಗ ಮುಸ್ಲಿಮರು ವಾಸಿಸುವ ಪ್ರದೇಶಗಳು ಹಾಗೂ ಮಸೀದಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
15 ಜನ ಪೊಲೀಸ್ ವಶಕ್ಕೆ ; ಎಸ್ಪಿ ಮಾಹಿತಿ
ರಟ್ಟಿಹಳ್ಳಿ ಪಟ್ಟಣದಲ್ಲಿ ಕಲ್ಲು ತೂರಾಟ ಪ್ರಕರಣದ ಬಗ್ಗೆ ಹಾವೇರಿ ಎಸ್ಪಿ ಶಿವಕುಮಾರ್ ಗುಣಾರ್ ಪ್ರತಿಕ್ರಿಯೆ ನೀಡಿದ್ದು, 15 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ರಟ್ಟಿಹಳ್ಳಿ ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಯುತ್ತಿದ್ದಾಗ ಅವರು ಮಾರ್ಗಬಿಟ್ಟು ಕಾರಂಜಿ ಸರ್ಕಲ್ ಬಳಿ ತೆರಳಿದ್ದಾರೆ. ಈ ವೇಳೆ ಕಲ್ಲುತೂರಾಟ ನಡೆದಿದೆ. 8-10 ಮನೆಗಳಿಗೆ ಹಾನಿಯಾಗಿದ್ದು, ಕಾರುಗಳು ಕೂಡಾ ಜಖಂ ಆಗಿದಾವೆ. ಪೋಲಿಸರು ಪರಿಸ್ಥಿತಿಯನ್ನು ಹತೋಟೆಗೆ ತಂದಿದ್ದಾರೆ. ಪ್ರಕರಣ ಸಂಬಂಧ ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಜಗಳವಾಗದ ರೀತಿ ಸೌಹಾರ್ದಯುತವಾಗಿ ಸಂಘರ್ಷವನ್ನು ಬಗೆಹರಿಸಬೇಕು ಎಂದು ಹೇಳಿದ್ದಾರೆ. ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಮಾತನಾಡಿದ ಅವರು, ಪೊಲೀಸರು ಶಾಂತಿ ಕಾಪಾಡುವ ಕೆಲಸವನ್ನು ಮಾಡಬೇಕು. ಯಾರೇ ಆಗಲಿ ಕಾನೂನು ಉಲ್ಲಂಘಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.