

ನವದೆಹಲಿ: ಭೀಕರ ಭೂಕಂಪಕ್ಕೆ ತುತಾಗಿರುವ ಟರ್ಕಿಗೆ ಭಾರತವು ‘ಆಪರೇಶನ್ ದೋಸ್ತ್’ ಕಾರ್ಯಾಚರಣೆ ಮೂಲಕ ಪರಿಹಾರ ಸಾಮಗ್ರಿಗಳನ್ನು ಕಳಿಸಿ ಮಾನವೀಯತೆ ಮೆರೆಯುತ್ತಿರುವ ಬಗ್ಗೆ ಭಾರತದಲ್ಲಿನ ಟರ್ಕಿ ರಾಯಭಾರಿ ಫಿರಟ್ ಸುನೆಲ್ (Firat Sunel) ಧನ್ಯವಾದ ಅರ್ಪಿಸಿದ್ದಾರೆ. ಭಾರತ ನಮಗೆ ನೀಡುವ ಒಂದು ಹಾಸಿಗೆ, ಹೊದಿಕೆ ಹಾಗೂ ಡೇರೆಗಳು ನಮಗೆ ತುಂಬ ಮೌಲ್ಯಯುತವಾಗಿದೆ. ಅವಶೇಷಗಳಡಿ ಸಿಲುಕಿರುವ ನೂರು ಸಾವಿರಾರು ಜನರಿಗೆ ಇದು ಅತಿ ಮುಖ್ಯವಾಗಿದೆ ಎಂದು ಸುನೆಲ್ ಟ್ವೀಟರ್ನಲ್ಲಿ ಧನ್ಯವಾದ ಹೇಳಿದ್ದಾರೆ. ಅಲ್ಲದೇ ಆಪರೇಷನ್ ದೋಸ್ತ್ (Operation Dost) ಭಾರತ ಹಾಗೂ ಟರ್ಕಿ ನಡುವಿನ ಸ್ನೇಹವನ್ನು ಮತ್ತಷ್ಟು ವೃದ್ಧಿಸಿದೆ ಎಂದಿದ್ದಾರೆ. ಭಾನುವಾರ ಆಪರೇಶನ್ ದೋಸ್ತ್ನ 7ನೇ ವಿಮಾನವು ಭಾರತದಿಂದ 23 ಟನ್ ಪರಿಹಾರ ಸಾಮಗ್ರಿಗಳನ್ನು ಹೊತ್ತು ಸಿರಿಯಾದ (Syria) ಡಮಾಸ್ಕಸ್ (Damascus) ತಲುಪಿತ್ತು.

ಇಸ್ತಾಂಬುಲ್: ಕಳೆದ ಸೋಮವಾರ ಟರ್ಕಿ ಮತ್ತು ಸಿರಿಯಾಗಳಲ್ಲಿ ಸಂಭವಿಸಿದ 7.8 ತೀವ್ರತೆಯ ಭಾರೀ ಭೂಕಂಪಕ್ಕೆ (earthquake) ಈವರೆಗೆ ಮೃತಪಟ್ಟವರ ಸಂಖ್ಯೆ 35,224 ಕ್ಕೆ ಏರಿಕೆಯಾಗಿದೆ. ಈ ಪೈಕಿ ಟರ್ಕಿಯಲ್ಲಿ 31,643 ಹಾಗೂ ಸಿರಿಯಾದಲ್ಲಿ 3,581 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1939ರಲ್ಲಿ ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ 32,700 ಜನರು ಸಾವನ್ನಪ್ಪಿದ್ದರು. ಅದನ್ನು ಹೊರತುಪಡಿಸಿದರೆ ಈಗಿನದ್ದೇ ಅತಿದೊಡ್ಡ ದುರಂತವಾಗಿದೆ. ಸಾವಿನ ಸಂಖ್ಯೆ ಏರುತ್ತಿರುವುದನ್ನು ನೋಡಿದರೆ, 1939ರ ಅಂಕಿ-ಅಂಶಗಳನ್ನು ಟರ್ಕಿ ಭೂಕಂಪ ಮೀರಿಸಬಹುದು ಎಂದು ವಿಶ್ಲೇಷಿಸಲಾಗಿದೆ.
ಸದ್ಯದ ಭೂಕಂಪದಿಂದ ಚೇತರಿಸಿಕೊಳ್ಳುವ ಮೊದಲೇ ಟರ್ಕಿಯ ದಕ್ಷಿಣದಲ್ಲಿರುವ ಕಹ್ರಮನ್ಮರಸ್ (Kahramanmaras) ನಗರದಲ್ಲಿ ಭಾನುವಾರ 3 ಸೆಕೆಂಡ್ಗಳ ಕಾಲ 4.7 ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ ಹೆಚ್ಚಿನ ಹಾನಿ ವರದಿಯಾಗಿಲ್ಲ.
